Wednesday, January 30, 2013

ಹಳೆಯ ನೆನಪುಗಳು

ನಾನು ಹೇಳುತ್ತಿರುವುದು 1950-75 ರ ಸಮಯದ ಕಥೆ
ಹಳೇ ಕಾಲದ ಚಿಕ್ಕ ಬೆಂಗಳೂರಿನಲ್ಲಿ ಸಿಟಿ ಮಾರ್ಕೆಟ್, ಮೆಜೆಸ್ಟಿಕ್ ಮತ್ತು ಶಿವಾಜಿನಗರ ಮುಖ್ಯ ಕೇಂದ್ರಗಳಾಗಿದ್ದವು. ಸಾರಿಗೆ ಸಂಸ್ಠೆಯಾದ ಬಿ.ಟಿ.ಎಸ್ ನ ಮಾರ್ಗಗಳು
೧ ಸಿಟಿ ಮಾರ್ಕೆಟ್ ಯೆಡೆಯೂರ್ ಟರ್ಮಿನಸ್ ವಿಶ್ವೇಶ್ವರಪುರದ ಮೂಲಕ
೨ ಸಿಟಿ ಮಾರ್ಕೆಟ್ ಯೆಡೆಯೂರ್ ಟರ್ಮಿನಸ್ ಚಾಮರಾಜಪೇಟೆ ಮೂಲಕ
೩ ಸಿಟಿ ಮಾರ್ಕೆಟ್ ಮೆಜೆಸ್ಟಿಕ್
೪ ಸಿಟಿ ಮಾರ್ಕೆಟ್ ಸ್ಯಾನಿಟೋರಿಯಮ್ (ಸ್ಯಾನಿಟೋರಿಯಮ್ ಮತ್ತು ಮೆಂಟಲ್ ಆಸ್ಪತ್ರೆ ಹತ್ತಿರವಿತ್ತು ಮತ್ತು ಅದರ ಮೂಲಕ ಹೋಗಬೇಕು)
ಕೊಂಚ ಮತಿಭ್ರಮಣರನ್ನು ಆಗ ರೂಟ್ ನಂಬರ್ ೪ ಅನ್ನುತ್ತಿದ್ದರು.
೫ ಸಿಟಿ ಮಾರ್ಕೆಟ್ ಶಿವಾಜಿನಗರ ಡಬ್ಬಲ್^ಡೆಕರ್ ಬಸ್ಸು ಈ ಮಾರ್ಗಕ್ಕೆ ಬಂತು.
೧೧ ಬಸವನಗುಡಿ ಮಲ್ಲೆಶ್ವರ ಆಗಿನ ಕಾಲಕ್ಕೆ ಉದ್ದದ ಮಾರ್ಗ
೧೬ ಬಸವನಗುಡಿ ಶಿವಾಜಿನಗರ.
ಬಸ್ಸನ್ನು ನಿಲ್ಲಿಸಲು ಮತ್ತು ಹೊರಡಿಸಲು ಘಂಟೆ ಉಪಯೋಗಿಸುತ್ತಿದ್ದರು. ಘಂಟೆ ಚಾಲಕರ ಹತ್ತಿರವಿರುತ್ತಿತ್ತು. ಅದಕ್ಕೆ ದಾರ ಕಟ್ಟಿ ಲೂಪ್^ಗಳ ಮೂಲಕ ಬಸ್ಸಿನ ಹಿಂದಿನವರೆಗೂ ಬೆಳೆಸಿ ಎಲ್ಲಿ ಬೇಕಾದರೂ ಅದನ್ನು ಯಾರು ಬೇಕದರೂ ಘಂಟೆ ಹೊಡೆಯಬಹುದಿತ್ತು. ಅಂದರೆ ಇಳಿಯ ಬೇಕಾದ ಪ್ರಯಾಣಿಕನೂ ಸೂಚನೆ ಕೊಡಲು ಅದರಿಂದ ಸಾಧ್ಯವಾಗುತ್ತಿತ್ತು. ಟಿ.ಐ.ಪಿ ಟಿಕೆಟ್ ಇಷ್ಯೂಯಿಂಗ್ ಪಾಯಿಂಟ್ ಗಳಲ್ಲಿ ವಿಶೇಷ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದವು. ಟಿಕೆಟ್ಟು ಕೊಡಲು ಬಸ್ಸನ್ನು ನಿಲ್ಲಿಸಿದ್ದರೆ ತಾಳ್ಮೆಗೆಟ್ಟ ಪ್ರಯಾಣೀಕರು ಮೇಲಿಂದ ಮೇಲೆ ಬಸ್ಸು ಹೊರಡಬೇಕೆಂದು ಘಂಟೆ ಬಾರಿಸುತ್ತಿದ್ದರು. ಆದರೂ ಚಾಲಕನು ನಿರ್ವಾಹಕನ ವಿಶೇಷ ಸೂಚನೆ ಬಂದರೆ ಮಾತ್ರ ಬಸ್ಸನ್ನು ಹೊರಡಿಸುತ್ತಿದ್ದ.

ಬೆಂಗಳೂರಿನಲ್ಲಿ ಆಗ ಎಂಟು ಅಂಚೆ ವಿತರಣಾ ವಿಭಾಗಗಳು ಇದ್ದವು. ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಇನ್ನೊಂದು ಹೊಸ ವಿಭಾಗವನ್ನು ತೆರೆದರು. ಅದು ಗಾಂಧಿನಗರ ಅದರ ಅಂಕೆ ೯. ೮ ರಿಂದ ೯ ಆಗಲು ಕೆಲವು ದಶಕಗಳೇ ಅದವು.

ಅವೆನ್ಯೂ ರಸ್ತೆ ಹಿಂದೆ ಬೆಳೆಗ್ಗೆ ೯ರಿಂದ ೧೨ರ ವರೆಗೆ ಸಿಟಿ ಮಾರ್ಕೆಟ್ ಕಡೆಯಿಂದ ಏಕಮುಖ ರಸ್ತೆ ಆಗಿತ್ತು. ಸರಿಯಾಗಿ ಹನ್ನೆರಡು ಘಂಟೆಗೆ ಮೈಸೂರು ಬ್ಯಾಂಕ್ ಕಡೆಯಿಂದ ಮೊದಲು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದ್ದ ವಾಹನವೆಂದರೆ ಆರ್ರೆಮೆಸ್ ವ್ಯಾನ್. ಅದು ಅವೆನ್ಯೂ ರಸ್ತೆ ಅಂಚೆಕಚೇರಿಯಲ್ಲಿ ಕೆಲಸ ಮುಗಿಸಿ ಸರಿಯಾಗಿ ಹನ್ನೆರಡು ಘಂಟೆಗೆ ಹೊರಡುತ್ತಿತ್ತು. ದಿನವೂ ಇದೇ ಅಚ್ಚುಕಟ್ಟು.

ಕೋಟೆ ಹೈಸ್ಕೂಲಿನಿಂದ ನ್ಯಾಷನಲ್ ಹೈಸ್ಕೂಲ್^ವರೆಗಿನ ಕೃಷ್ಣರಾಜೇಂದ್ರ ರಸ್ತೆಯ ಸಾಲು ಮರಗಳು ಎಷ್ಟು ದಟ್ಟ ಮತ್ತು ಸೊಂಪಾಗಿದ್ದವು ಅಂದರೆ ಸೂರ್ಯನ ಕಿರಣಗಳು ಅವುಗಳನ್ನು ದಾಟಿ ರಸ್ತೆಗೆ ಬೀಳಲು ಸಾಧ್ಯವಿರಲೇ ಇಲ್ಲ. ಅಲ್ಲದೆ ಆ ಮರಗಳು ಸಾವಿರಾರು ಹಕ್ಕಿಗಳಿಗೆ ಮನೆಯಾಗಿದ್ದವು. ಸಂಜೆಯಾದರೆ ಅವುಗಳ ಕಲರವ ಶಿಖಿರಕ್ಕೆ ಮುಟ್ಟುತ್ತಿದ್ದವು. ಅವುಗಳ ಹಿಕ್ಕೆಗಳು ಕರಿಯ ರಸ್ತೆಯ ಮೇಲ್ಮೈಯನ್ನು ಬೆಳ್ಳಗೆ ಮಾಡಿಬಿಟ್ಟಿದ್ದವು! ಸ್ವಲ್ಪ ಮಳೆ ಬಂದರೂ ಆ ರಸ್ತೆಯಲ್ಲಿ ಹಕ್ಕಿಗಳ ಹಿಕ್ಕೆಯ ಪ್ರಭಾವದಿಂದ ವಾಹನಗಳು ಸ್ಕಿಡ್ ಆಗುತ್ತಿದ್ದವು.

ಬೆಂಗಳೂರಿನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಡ್ರೈವ್^ಇನ್ ಚಿತ್ರಮಂದಿರ ಇತ್ತು. ಕಾರಿನಲ್ಲಿ ಕೂತೇ ಚಿತ್ರ ನೋಡಬಹುದಿತ್ತು. ಅದೇ ತರಹ ಡ್ರೈವ್^ಇನ್ ರೆಸ್ಟಾರೆಂಟ್ (ಈಗಿನ) ಕಾಳಿದಾಸ ಮಾರ್ಗದಲ್ಲಿ ಇತ್ತು. ಕಾರಿನಲ್ಲಿ ಕೂತೇ ತಿಂಡಿ ತಿನ್ನಬಹುದಿತ್ತು. ಕಾರ್ ಕಿಟಕಿಗೆ ಒಂದು ಅಟ್ಯಾಚ್ಮೆಂಟ್ ಇಟ್ಟು ಅದರ ಮೇಲೆ ನಿಮ್ಮ ಪ್ಲೇಟ್ ಇದುತ್ತಿದ್ದರು.

ನಮ್ಮ ಮನೆಯಲ್ಲಿ ಸ್ನಾನಕ್ಕೆ ಬಿಸಿನೀರು ಕಾಯಿಸಲು ಪ್ರೆಷರ್ ಬಾಯಿಲರ್ ಅಳವಡಿಸಿದ್ದೆ. ಅದರ ಕಾರ್ಯ ವೈಖರಿ ಹಾಗೂ ರಚನೆ ವಿದ್ಯುತ್ ಗೈಙರ್^ನಂತೆಯೇ ಆದರೆ ಶಾಖದ ಮೂಲ ಉರಿಯುವ ಸೌದೆ ತರಹ ಯಾವುದಾದರೂ ಉರವಲು. ಪಕ್ಕದ ಮನೆಯವರು ಹೊಗೆ ಎಂದು ತಕರಾರು ತೆಗೆದಾಗ ಅದನ್ನು ನಿಲ್ಲಿಸಿಬಿಟ್ಟು ಸೂರ್ಯ ಶಾಖದಿಂದ ನೀರು ಕಾಯಿಸುವ ವ್ಯವಸ್ತೆ ಮಾಡಿಕೊಂಡೆ.

ನಮ್ಮ ಊರು ಮಾಗಡಿ. ಆ ಕಾಲದಲ್ಲಿ ಅದು ದೊಡ್ಡ ಊರು. ನೆಲಮಂಗಲದ ಶಾಲೆಯಿಂದ ಮಿಡ್ಲ್^ಸ್ಕೂಲ್ ಪರೀಕ್ಷೆಗೆ ಮಾಗಡಿಗೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರುತ್ತಿದ್ದರು. ಆವರಿಗೆ ಊಟ ವಸತಿ ಮಾಗಡಿ ಸಾರ್ವಜನಿಕರು ವ್ಯವಸ್ತೆ ಮಾಡುತ್ತಿದ್ದರು. ನೆಲಮಂಗಲ ಬೆಂಗಳೂರಿಗೆ ಸಮೀಪವಾದದ್ದರಿಂದ ಅದು ಬೆಳೆದು ಆದ ವಿಪರ್ಯಾಸವೆಂದರೆ ಮಾಗಡಿಯ ಹೈಸ್ಕೂಲ್ ವಿದ್ಯಾರ್ಥಿಗಳು ಎಸ್ಸೆಸ್ಸಲ್ಸಿ ಪರೀಕ್ಷಾ ಕೇಂದ್ರಕ್ಕೆ ಕೆಲವು ವರ್ಷ ನೆಲಮಂಗಲಕ್ಕೆ ಹೋದರು.

No comments: